ನಂಜನಗೂಡು: ಅತಿ ವೇಗವಾಗಿ ಬೆಳೆಯುತ್ತಿರುವ ನಂಜನಗೂಡು ಪಟ್ಟಣ ವಾಗಿದ್ದು ತಾಲೂಕು ಕೇಂದ್ರವಾಗಿದೆ. ಚಿಂತಾಮಣಿ ಗಣಪತಿ ದೇವಸ್ಥಾನದ ಮುಂದೆ ಹಲವರು ಹೂ ಮಾರುವ ಕಾಯಕವನ್ನು ಮಾಡಿಕೊಂಡಿದ್ದು ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ದೇವರ ಕಾರ್ಯವನ್ನು ಹಾಗೂ ಭಕ್ತಾದಿಗಳ ಸೇವೆಯನ್ನು ಹೂ ಮಾರುವುದರ ಮೂಲಕ ಬದುಕನ್ನು ಕಂಡುಕೊಂಡಿದ್ದಾರೆ. ಆದರೆ ಈಗ ಆ ಸ್ಥಳದಲ್ಲಿ ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಅಕ್ಷರಸಹ ಸತ್ಯವಾಗಿದೆ. ಆದರೆ ಈಗ ಪಟ್ಟಣ ಸಂಚಾರಿ ಉಪನಿರೀಕ್ಷಕರು ಹೂ ಮಾರುವವರಿಗೆ ಸ್ಥಳವ ಬದಲಾವಣೆ ಮಾಡಿ ಎಂದು ಸೂಚನೆ ನೀಡಿದ್ದು, ಹೂ ಮಾರುವರು ನಮ್ಮ ಜೀವನ ಇದರಲ್ಲೇ ಸಾಗಬೇಕೆಂದು ದೇವಸ್ಥಾನದ ಮುಂದೆ ನಮ್ಮ ಕಾಯಕವನ್ನು ಮುಂದುವರೆಸಲು ಅವಕಾಶ ನೀಡಬೇಕೆಂದು ಪತ್ರಿಕೆಯ ಮೂಲಕ ಭರತ್, ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.
Category: ಭಕ್ತಿ
ಶರಣ ಪರಂಪರೆಯ ದಾರಿಯಲ್ಲಿ ಸಾಗಿಬಂದ ‘ಮುಸಲಾಪುರ’ ಮತ್ತು ಮುಸಲಾಪುರ ಜಾತ್ರೆ
ಶರಣ ಪರಂಪರೆಯ ದಾರಿಯಲ್ಲಿ ಸಾಗಿಬಂದ ‘ಮುಸಲಾಪುರ’ ಮತ್ತು ಮುಸಲಾಪುರ ಜಾತ್ರೆ : ಒಂದು ಪ್ರಾತ್ಯಕ್ಷಿಕ ಅನುಭವ
ಒಂದು ವಿಶೇಷ ಸಾರ್ವಜನಿಕ ಒಂದುಗೂಡುವಿಕೆಗೆ ‘ಜಾತ್ರೆ’ ಎನ್ನುವ ಪರಿಕಲ್ಪನೆ ಇದೆ. ದೇವರ ಜಾತ್ರೆಗಳು ಗ್ರಾಮೀಣ ಪ್ರದೇಶಗಳ ಒಂದು ಬಹುಮುಖ್ಯ ಪರಂಪರೆ. ಸೌಹಾರ್ದತೆ, ಒಗ್ಗಟ್ಟು, ಪರಹಿತ ಚಿಂತನೆ, ಸೊಬಗು-ಸೊಗಡಿನ ಆಚರಣೆಗಳು .. ಹೀಗೆ ಹಲವು ವಿಶೇಷ ಪರಿಕಲ್ಪನೆಗಳು ಗ್ರಾಮ ಜಾತ್ರೆಗಳಿಗಿರುತ್ತವೆ.
ಶ್ರಾವಣ ಮಾಸ ನಮ್ಮ ಪರಂಪರೆಯ ಪವಿತ್ರ ಮಾಸ. ಹಬ್ಬಗಳ, ಜಾತ್ರೆಗಳ ಮಾಸ ಎಂತಲೂ ಕರೆಯಬಹುದು. ಈ ಮಾಸ ಹೊರತಾಗಿಯೂ ವಿವಿಧ ಅಮವಾಸ್ಯೆ, ಹುಣ್ಣಿಮೆ, ತಿಥಿ, ಪಕ್ಷಗಳ ಆಧರಿತ ಜಾತ್ರೆಗಳಿಗೂ ನಮ್ಮಲ್ಲಿ ಕಡಿಮೆ ಇಲ್ಲ.
ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ತವರುಮನೆಗೆ ಬರಲು ಒಂದು ಕಾರಣ ಸೃಷ್ಟಿಸಲೂ ಜಾತ್ರೆಯ ಆಚರಣೆ ಬಂದಿರುವ ಉದಾಹರಣೆ ಪಕ್ಕದ ಯಲಬುರ್ಗಾ ತಾಲೂಕಿನಲ್ಲಿದೆ. ಮಹಾಮಹಿಮರ ಸ್ಮರಣೆಯ ದಿನಗಳೂ ಜಾತ್ರೆಗಳಾಗಿರುವ ಪ್ರತೀತಿಗಳಿವೆ. ಜಾತ್ರೆಯ ಆಚರಣೆಗೆ ಒಂದು ಪವಿತ್ರ ಉದ್ದೇಶವಂತೂ ಖಂಡಿತ ಇದೆ.
ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಕಳೆದ ದಶಕದಿಂದೀಚಿಗೆ ಸಮಾಜಮುಖಿ ಜಾತ್ರೆಯಾಗಿ ಬದಲಾಗಿದ್ದು ಜಾತ್ರೆಯ ನೆಪದಲ್ಲಿ ಸಾಕಷ್ಟು ಸಮಾಜೋದ್ಧಾರ ಕೆಲಸಗಳಾಗುತ್ತಿವೆ.
ಕೊಪ್ಪಳದಿಂದ ಕನಕಗಿರಿಗೆ ಹೋಗುವ ದಾರಿಯಲ್ಲಿ ಬರುವ ಗ್ರಾಮ ‘ಮುಸಲಾಪುರ’. ಇಲ್ಲಿನ ಪ್ರಾಥಮಿಕ ಶಾಲೆಗೆ ಕಳೆದ ವರ್ಷ ವರ್ಗಾವಣೆಯಾಗಿ ಬಂದಾಗ ನನಗೆ ಗಮನ ಸೆಳೆದದ್ದು ಮುಸಲಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಮಕ್ಕಳ ಸಂಸ್ಕಾರ. ಬಹುತೇಕ ಮಕ್ಕಳ ಹಣೆಯಲ್ಲಿ ತಿದ್ದಿ ತೀಡಿದ ವಿಭೂತಿ, ಎರಡೂ ಕೈಗಳನ್ನು ಮುಗಿದು ನಮಸ್ಕರಿಸುವ ಗುಣ, ಬಸವಾದಿ ಶರಣರ ಕುರಿತಾಗಿ ವಿಶೇಷ ಆಸಕ್ತಿಯನ್ನು ಹೊಂದಿರುವುದನ್ನು ಗಮನಿಸಿದೆ.
ಈ ನೆಲದ ಒಳ್ಳೆಯ ಸಂಸ್ಕಾರದ ಪರಂಪರೆಯ ಫಲದಿಂದ ಇಂಥ ಒಳ್ಳೆಯ ನಡವಳಿಕೆ ಮಕ್ಕಳಲ್ಲಿ ಬಂದಿರಬೇಕು ಎಂದು ಊಹಿಸಿದೆ. ಆ ನಂತರ ಈ ನೆಲದ ಪರಂಪರೆಯನ್ನು ತಿಳಿದುಕೊಳ್ಳಲು ಹೋದಾಗ ಗೊತ್ತಾಗಿದ್ದು ಮುಸಲಾಪುರ ವು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಶರಣ ಸಂಸ್ಕೃತಿಯ ಗ್ರಾಮವೆಂಬುದು.
ಈ ಗ್ರಾಮಕ್ಕೆ ‘ಬಸವಗಿರಿ’, ‘ಬಸವನಗಿರಿ’ ಎಂದು ಕರೆಯಲಾಗುತ್ತಿತ್ತು. ಶಿವನ ವಾಹನವಾದ ನಂದಿಯ ‘ದಿಡಗಿ ಬಸವಣ್ಣನ ದೇವಾಲಯ’ ಇಲ್ಲಿ ಇರುವುದರಿಂದ ಈ ಹೆಸರು ಬಂದಿತ್ತೆಂಬ ಮೌಖಿಕ ಉಲ್ಲೇಖಗಳಿವೆ. ‘ದಿಡಗಿ’ ಶಬ್ದಕ್ಕೆ ಗಿರಿ, ಆಲಯ, ಸುಕ್ಷೇತ್ರ, ಪವಿತ್ರ ಸ್ಥಳ ಎಂಬ ಸಮಾನಾರ್ಥ ಪದಗಳಿವೆ. ಹೀಗಾಗಿ ಬಸವಣ್ಣನು ನೆಲೆಸಿರುವ ದಿಡಗಿಯೇ ಬಸವನ ‘ದಿಡಗಿ’, ಬಸವನ’ಗಿರಿ’ ಮುಂದೆ ‘ಬಸವಗಿರಿ’ಯಾಗಿದೆ.
ಇನ್ನೂ ಮಹತ್ವದ ಸಂಗತಿಯೆಂದರೆ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನವರ ಸೋದರಳಿಯ ಹನ್ನೆರಡನೇ ಶತಮಾನದ ಅಗ್ರಗಣ್ಯ ಶರಣರಲ್ಲಿ ಒಬ್ಬರಾದ ಚನ್ನಬಸವಣ್ಣನವರು ತಂಗಿ ಹೋದ ತಾಣ ಈ ಗ್ರಾಮ. ಹೀಗಾಗಿ ಶರಣ ಪರಂಪರೆಯ ದಟ್ಟ ಛಾಯೆ ಈ ಗ್ರಾಮದಲ್ಲಿ ಮುಂದುವರಿದುಕೊಂಡು ಬಂದಿದೆ.
ದಿಡಗಿ ಬಸವೇಶ್ವರ ದೇವಸ್ಥಾನದ ಜೊತೆಗೆ ಇಲ್ಲಿ ಬನ್ನಿ ಬಸವೇಶ್ವರ ಮತ್ತು ಚನ್ನಬಸವೇಶ್ವರ ದೇವಸ್ಥಾನಗಳೂ ಇವೆ. ಇಡೀ ಗ್ರಾಮ ಒಂದರ್ಥದಲ್ಲಿ ‘ಬಸವ’ಮಯವಾಗಿದೆ. ಬಸವಣ್ಣ, ಚನ್ನಬಸವಣ್ಣನವರು ಮುಸಲಾಪುರ ಗ್ರಾಮದ ಮನೆ-ಮನಗಳ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದ್ದಾರೆ. ಇಲ್ಲಿಯ ಬಹುತೇಕ ಮನೆಗಳಿಗೆ ‘ಬಸವ ನಿಲಯ’, ‘ಬಸವೇಶ್ವರ ಕೃಪೆ’, ‘ಚನ್ನಬಸವಣ್ಣ ನಿಲಯ’, ‘ಬಸವಣ್ಣನ ಜ್ಯೋತಿ’ ಎನ್ನುವ ಹೆಸರುಗಳಿವೆ. ಗ್ರಾಮದ ಬಹುತೇಕ ಮನೆಗಳಲ್ಲಿ ಬಸವರಾಜ, ಚನ್ನಬಸವ, ಬಸಮ್ಮ, ಚನ್ನಬಸಮ್ಮ ಹೆಸರಿನ ಕನಿಷ್ಟ ಒಬ್ಬರಾದರೂ ಇರುತ್ತಾರೆ. ‘ಬಸವ ನಾಮ’ವು ಇಲ್ಲಿ ಒಂದು ಮಂತ್ರವಾಗಿದೆ. ಶರಣ ಪರಂಪರೆಯ ಪ್ರಭಾವದ ಹೆಮ್ಮೆಯ ಸ್ಥಳವಾಗಿದೆ.
18 ಮತ್ತು 19 ನೇ ಶತಮಾನಗಳ ಕಾಲಘಟ್ಟದಲ್ಲಿ ಈ ಗ್ರಾಮವು ಒಣಕೆಗಳನ್ನು ತಯಾರಿಸುವ ಮರಗಳನ್ನು ಹೊಂದಿದ್ದ ಸಮೃದ್ಧ ಅರಣ್ಯದ ನೈಸರ್ಗಿಕ ತಾಣವಾಗಿತ್ತು. ಹೀಗಾಗಿ ಇದು ‘ಒಣಕೆ’ಗಳನ್ನು ತಯಾರಿಸುವ ವ್ಯಾಪಾರೀ ಕೇಂದ್ರವಾಗಿತ್ತೆಂಬ ಮಾಹಿತಿಗಳಿವೆ.
ಮುಂದೆ ಈ ಪ್ರದೇಶ ಹೈದರಾಬಾದ-ಕರ್ನಾಟಕದ ಭಾಗವಾದ ಮೇಲೆ ಇಲ್ಲಿ ತಯಾರಿಸಲಾಗುತ್ತಿದ್ದ ಒಣಕೆ ಮರಗಳತ್ತ ಮುಸ್ಲಿಂ ವ್ಯಾಪಾರಿಗಳ ಗಮನ ಹರಿಯಿತು. ನಿಜಾಮನ ಆಡಳಿತ ಭಾಷೆ ಉರ್ದು ಆಗಿದ್ದರಿಂದ ಉರ್ದು ಭಾಷೆಯು ಸಹಜವಾಗಿ ಇಡೀ ಹೈದರಾಬಾದ-ಕರ್ನಾಟಕದ ಭೌಗೋಳಿಕ ಪರಿಸರದ ಮೇಲೆ ತನ್ನ ಪರಿಣಾಮ ಬೀರಿತು. ಇದರಿಂದ ಕನ್ನಡದಲ್ಲಿ ಉರ್ದು ಭಾಷೆ ಮಿಶ್ರಿತವಾಯಿತು.
ಇಲ್ಲಿ ಒಣಕೆ ಮರಗಳು ಹೇರಳವಾಗಿದ್ದವು. ‘ಒಣಕೆ ಮರ’ಕ್ಕೆ ಉರ್ದು ಭಾಷೆಯಲ್ಲಿ ‘ಮುಸಲ್’ ಎಂದು ಕರೆಯುತ್ತಾರೆ. ‘ಆಲಂ’ ಎಂದರೆ ಜಗತ್ತು ಅಥವಾ ಪ್ರದೇಶ ಎಂಬರ್ಥಗಳಿವೆ. ಒಣಕೆ (ಮುಸಲ್) ಗಳನ್ನು ಮಾರುವ ವ್ಯಾಪಾರದ ಆಲಂ (ಜಗತ್ತು, ಪ್ರದೇಶ) ಮುಸಲ್ ಆಲಂಪುರವಾಗಿ ಬದಲಾಗಿ ಪ್ರಸ್ತುತ ‘ಮುಸಲಾಪುರ’ಕ್ಕೆ ಕಾರಣವಾಗಿದೆ. ಮುಸಲಾಪುರ ಇದೀಗ ಸಣ್ಣ ಹಳ್ಳಿಯಾಗುಳಿದಿಲ್ಲ. ಬೆಳೆದಿರುವ, ಇನ್ನೂ ಬೆಳೆಯುತ್ತಲೇ ಇರುವ ಸುಧಾರಿತ ಹಳ್ಳಿ ಎನ್ನಬಹುದು.
ಇಲ್ಲಿ ಪ್ರತೀ ವರ್ಷ ಎಳ್ಳ ಅಮವಾಸ್ಯೆಯ ದಿನ ‘ಶ್ರೀ ಚನ್ನಬಸವೇಶ್ವರ’ ಮತ್ತು ‘ಶ್ರೀ ಮಾರುತೇಶ್ವರ’ ಜಾತ್ರೆ ನಡೆಯುತ್ತದೆ. ಇಡೀ ಮುಸಲಾಪುರ ಗ್ರಾಮಕ್ಕೆ ಗ್ರಾಮವೇ ಸಡಗರ, ಸಂಭ್ರಮದಲ್ಲಿ ತೇಲುತ್ತಿರುತ್ತದೆ. ತಮ್ಮ ಬಂಧು-ಬಳಗದವನ್ನು, ಸ್ನೇಹಿತರನ್ನು ಜಾತ್ರೆಗೆ ಆಮಂತ್ರಿಸಿ ತಮ್ಮ ಸಡಗರದಲ್ಲಿ ಎಲ್ಲರಿಗೂ ಬೆಸುಗೆ ಹಾಕುತ್ತಾರೆ.
ವಾರ ಮೊದಲೇ ಮನೆಗಳನ್ನು ಸಾರಿಸಿ ಸ್ವಚ್ಛಗೊಳಿಸಿಕೊಳ್ಳುವುದು, ಭಕ್ತಿ-ಭಾವದಿಂದ ಜಾತ್ರೆಯ ಪೂರ್ವ ತಯಾರಿ ಮಾಡಿಕೊಳ್ಳುವುದು, ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವುದು, ಸಿಹಿ ತಿನಿಸುಗಳನ್ನು ತಯಾರಿಸಿಕೊಳ್ಳುವುದು .. ಹೀಗೆ ಹಲವು ಸಡಗರಗಳಿಗೆ ಇಲ್ಲಿನ ಜನತೆ ಸಾಕ್ಷಿಯಾಗುತ್ತಾರೆ.
ಪ್ರಾಥಮಿಕ ಶಾಲೆಯ ಮುಂದಿನ ಜಾಗದಲ್ಲಿ ಮೂರ್ನಾಲ್ಕು ದಿನಗಳ ಮೊದಲೇ ಹಾಕಲಾಗುವ ಜೋಕಾಲಿಗಳು ಮಕ್ಕಳ ಹಿಗ್ಗನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ.
“ನಮ್ ಜಾತ್ರಿ ಹಂಗಿರುತ್ತ, ತೇರು ಇಲ್ಲಿತನ ಬರುತ್ತ, ಹೊಸ ಬಟ್ಟಿ ಕೊಡಿಸ್ಯಾರ, ಮಾದಲಿ ಮಾಡತಾರ, ಬೂಂದೆ ತಂದೀವಿ, ಗುಡಿಗೆ ಜಲ್ದಿ ಹೋಗಬೇಕು, ಕೊಂಡ ಹಾರಾದು ನೋಡ್ತೀವಿ, ಹಾಲು-ಓಕುಳಿ ಬಾಳ ಚೆಂದಿರುತ್ತ, ಜಾತ್ರಿ ಹಿಂದಿನ ದಿನ ನಮ್ಮೂರಾಗ ಯಾರೂ ಮನಿ ಬಾಗಿಲಾನಾ ಹಾಕಾದಿಲ್ಲ, ಇಡೀ ಊರು ಎಷ್ಟು ಚೆಂದಾಗಿರುತ್ತ, ನಮ್ ಜಾತ್ರಿಗೆ ಬರ್ರಿ ಸರ್, ನಮ್ಮನಿಗೆ ಬರ್ರಿ ಸರ್” ಎಂದು ಶಾಲೆಯ ಮಕ್ಕಳು ತಮ್ಮ ಮುಗ್ದತೆ ಮತ್ತು ಸಡಗರದಿಂದ ಜಾತ್ರೆಗೆ ಆಹ್ವಾನಿಸಿದ್ದಾರೆ. ಅವರ ಖುಷಿಯನ್ನು ನೋಡಲಿಕ್ಕಾದರೂ ಜಾತ್ರೆಗೆ ಈ ಸಲ ಹೋಗಬೇಕೆನ್ನುವ ಆಸೆ ನನ್ನದು.
ಜಾತ್ರೆ ಆಚರಣೆ ಪೂರ್ವಿ ಕಾಲದಿಂದ ನಡೆಯುತ್ತಿದ್ದರೂ, 16 ವರ್ಷಗಳಿಂದ ಮಹಾರಥೋತ್ಸವ ಜರುಗುತ್ತಿದೆ. ಮುಸಲಾಪುರ ಗ್ರಾಮದ ಜಾತ್ರೆ ಎಂದರೆ ಗ್ರಾಮ್ಯ ಪರಿಸರದ, ಪರಂಪರೆಯ ಅನಾವರಣದಂತಿದೆ.
ಜಾತ್ರೆಯ ಮೂರು ದಿನಗಳ ಮೊದಲು ಕಳಸಾರೋಹಣವಾಗುತ್ತದೆ. ಕೊಪ್ಪಳದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳ ಮತ್ತು ಕನಕಗಿರಿಯ ಪೂಜ್ಯ ಚನ್ನಮಲ್ಲ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಜರುಗುತ್ತವೆ. ಕಳಸ ಏರಿಸಿದ ಮೇಲೆ ಹಲವು ಧಾರ್ಮಿಕ ಆಚರಣೆಗಳನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಜಾತ್ರೆಯ ಹಿಂದಿನ ದಿನ ರಾತ್ರಿ ಇಡೀ ಮುಸಲಾಪುರದಲ್ಲಿ ಯಾರೊಬ್ಬರ ಮನೆಗೂ ಬಾಗಿಲು ಹಾಕುವುದಿಲ್ಲ. ಜಾತ್ರೆಯ ದಿನ ನಸುಕಿನಲ್ಲಿ ಕೊಂಡ ಹಾರುವದನ್ನು ನೋಡುವುದೇ ಒಂದು ರೋಮಾಂಚನ.
ರೈತಾಪಿ ವರ್ಗದವರ ಬೆಳೆಗಳು ಸಮೃದ್ಧವಾಗಿರಲಿ, ಗ್ರಾಮದಲ್ಲಿ ಸಹಬಾಳ್ವೆ ನೆಲೆಸಲಿ ಎಂಬ ಆಶಯಗಳನ್ನು ಹೊತ್ತ ಮುಸಲಾಪುರ ಗ್ರಾಮದ ಹಿರಿಯರ ನೇತೃತ್ವದಲ್ಲಿ ಎಲ್ಲ ಗ್ರಾಮಸ್ಥರು ಜಾತ್ರೆಯನ್ನು ಮನೆಯ-ಊರಿನ ಹಬ್ಬವಾಗಿ ಆಚರಿಸುತ್ತಾರೆ.
ರಥೋತ್ಸವದ ಮುಂಚೆ ನಡೆಯುವ ಹಾಲಿನೋಕುಳಿ ಜಾತ್ರೆಯ ವಿಶೇಷತೆಯಲ್ಲೊಂದು. ಮುಸಲಾಪುರ, ಕನಕಗಿರಿ, ವೆಂಕಟಾಪುರ, ಬಂಕಾಪುರ ಹೀಗೆ ಸುತ್ತ-ಮುತ್ತಲ ಹಳ್ಳಿಗಳ ಯಾದವ ಬಾಂಧವರು ಜಾತ್ರೆಗೆಂದೇ ಸಾಕಷ್ಟು ಮೊದಲೇ ಹಾಲನ್ನು ಸಂಗ್ರಹಿಸಿಟ್ಟುಕೊಂಡು, ರಥೋತ್ಸವಕ್ಕೂ ಮುಂಚೆ ಹಾಲಿನೋಕುಳಿಯನ್ನು ಮಾಡುತ್ತಾರೆ. ತಮ್ಮ ಜಾನುವಾರುಗಳು ಸಮೃದ್ಧವಾಗಿರಲಿ ಎಂಬ ಹರಕೆ ಹೊತ್ತ ಸುತ್ತಲ ಹಳ್ಳಿಗಳ ಯಾದವ ಕುಟುಂಬದವರ ಹಾಲಿನೋಕುಳಿಯ ದೃಶ್ಯ ಮನೋಹರವಾಗಿರುತ್ತದೆ.
ರಥೋತ್ಸವದಲ್ಲಿ ಹತ್ತಾರು ಸಾವಿರ ಸಂಖ್ಯೆಯ ಭಕ್ತರು ಭಾಗವಹಿಸಿ ಭಾವಪರವಶರಾಗುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂಬ ಹರಕೆಗಳು ಎಲ್ಲರಲ್ಲಿರುತ್ತವೆ. ಬಸವಣ್ಣ ಮತ್ತು ಆಂಜನೇಯ ನಮ್ಮನ್ನು ಮತ್ತು ಊರನ್ನು ಕಾಯುತ್ತಾರೆ, ನಮ್ಮೆಲ್ಲರ ಆಶೋತ್ತರಗಳಿಗೆ ‘ಅಸ್ತು’ ಎನ್ನುತ್ತಾರೆ ಎನ್ನುವ ಭಾವ ತುಂಬಿರುತ್ತದೆ. ಒಟ್ಟಾರೆ ಮುಸಲಾಪುರದ ನೆಲ ‘ಇದು ನನ್ನ ದಿನ’ ಎಂದು ಹೆಮ್ಮೆಯಿಂದ ಬೀಗುತ್ತಿರುತ್ತದೆ.
ಬಳೆಗಳ ಸಾಲಿನಲ್ಲಿ ಹೆಣ್ಣುಮಕ್ಕಳ ಖರೀದಿ, ಆಟಿಕೆಗಳ ಸಾಲಿನಲ್ಲಿ ಮಕ್ಕಳ ಖರೀದಿ ಜೋರು. ಜೋಕಾಲಿಗಳ ಸುತ್ತಲೂ ಜನಜಂಗುಳಿ. ಜಾತ್ರೆಯ ಜವಾಬ್ದಾರಿ ಹೊತ್ತ ಎಲ್ಲ ಹಿರಿಯರ ಶ್ರಮ ಮೆಚ್ಚುವಂಥದ್ದು.
ಕಬಡ್ಡಿ ಮತ್ತಿತರ ದೇಶೀ ಆಟಗಳ ಸ್ಪರ್ಧೆಗಳನ್ನೂ ಆಯೋಜಿಸಲಾಗಿರುತ್ತದೆ. ರಾತ್ರಿಯೆಲ್ಲ ಸಾಮಾಜಿಕ-ಭಕ್ತಿಪ್ರಧಾನ ನಾಟಕಗಳ, ಕಲೆಗಳ ಪ್ರದರ್ಶನವಿರುತ್ತದೆ. ಮುಸಲಾಪುರ ಜಾತ್ರೆ ಎಂದರೆ ವಿವಿಧತೆಗಳ ಏಕತೆಯ ಆಗರವಾಗಿದೆ.
ಮುಸಲಾಪುರ ಜಾತ್ರೆ ಎಂದರೆ ವಿವಿಧತೆಗಳ ಏಕತೆಯ ಆಗರವಾಗಿದೆ. ಹಾಸಗಲ್ ಗ್ರಾಮದವರು ರಥದ ಹಗ್ಗವನ್ನು, ಪರಾಪುರದವರು ಕುದುರೆ ಕುಣಿತವನ್ನು, ಗಂಗನಾಳ ಗ್ರಾಮದವರು ನಂದಿಕೋಲನ್ನು ಮೆರವಣಿಗೆ ಮೂಲಕ ತರುತ್ತಾರೆ. ಜಾತ್ರೆಯ ಮರುದಿನ ಮದ್ದು ಸುಡುವ ಕಾರ್ಯಕ್ರಮ, ಜಾತ್ರೆ ಮುಗಿದ ಒಂದು ವಾರದ ನಂತರ ಕಡುಬಿನ ಕಾಳಗ, ಕಳಸಾವರೋಹಣ ಕಾರ್ಯಕ್ರಮಗಳು ಪರಂಪರೆಯಂತೆ ಸಾಗಿ ಬಂದಿದೆ.
ಇಂಥದ್ದೊಂದು ಗ್ರಾಮ್ಯ ಸೊಗಡಿನ ಜಾತ್ರೆಯ ಸೊಬಗನ್ನು ಒಮ್ಮೆಯಾದರೂ ನೋಡಬೇಕು.
ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾನವರ ಜಾತ್ರಾ ಕಾರ್ಯಕ್ರಮ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾನವರ ಜಾತ್ರಾ ಕಾರ್ಯಕ್ರಮವು ದಿನಾಂಕ14/12/2024 ರಂದು ಶನಿವಾರ ಸಾಯಂಕಾಲ ನಂದಾದೀಪದೊಂದಿಗೆ ಸಕಲವಾದ್ಯ ಬಾಜಿ ಭಜಂತ್ರಿ ಡೊಳ್ಳಿನ ಮೆಳದೊಂದಿಗೆ ಜಾತ್ರೆ ಪ್ರಾರಂಭವಾಗುವುದು ಅದೇ ರೀತಿಯಾಗಿ15/12/2024 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಭಕ್ತರ ಸಮ್ಮುಖದಲ್ಲಿ ದೇವರ ಗಂಗಾಸ್ನಾನ ಕಾರ್ಯಕ್ರಮ ನೆರವೇರುವುದ ಮೇಲೆ ಅಯ್ಯಣ್ಣ ಅವರ ಆರಾಧಕರಾದ ಶ್ರೀ ಬೀರಪ್ಪ ಪೂಜಾರಿ ಕಂಬಳಿ ಅವರಿಂದ ಸರಪಳಿ ಪವಾಡ ಕಾರ್ಯಕ್ರಮ ಜರುಗುವುದು ಅದೇ ರೀತಿಯಾಗಿ ದಿನಾಂಕ16/12/2024 ರಂದು ಸೋಮವಾರ ಜಂಗಿ ಪೈಲ್ವಾನರ ಕುಸ್ತಿ ಕಾರ್ಯಕ್ರಮ ಜರುಗಲಿದೆ ಬಲಾಡ್ಯ ಪೈಲ್ವಾನರಿಗೆ ಬೆಳ್ಳಿ ಕಡಗವನ್ನು ಬಹುಮಾನವಾಗಿ ಕೊಡಲಾಗುವುದು ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಶ್ರೀ ಅಯ್ಯಣ್ಣ ಮುತ್ಯ ದೇವಸ್ಥಾನದ ಮಂಡಳಿಯ ವತಿಯಿಂದ ಉಚಿತ ಅನ್ನದಾಸೋಹ ಪ್ರಸಾದದ ವ್ಯವಸ್ಥೆ ಇರುತ್ತದೆ ಹಾಗೂ ಜಾತ್ರಾ ವಿಶೇಷದ ಕಾರ್ಯಕ್ರಮದಲ್ಲಿ ಶ್ರೀ ಗುರುಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದ್ದು ದಿನಾಂಕ 15 -12-2024 ರಂದು ರಾತ್ರಿ 10 ಗಂಟೆಗೆ ರತ್ನಮಾಂಗಲ್ಯ ಎಂಬ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಅದೇ ರೀತಿಯಾಗಿ ದಿನಾಂಕ 17-12-2024 ರಂದು ಮಂಗಳವಾರ ರಾತ್ರಿ ಹತ್ತು ಗಂಟೆಗೆ ಮಾತು ಬಿದ್ದಿತ್ತು ಮೌನ ಗೆದ್ದಿತ್ತು ಎಂಬ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರಾದ ಬಾಪು ಗೌಡ ಎಂ ಕೊಡಮನಹಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇಂಗಳೇಶ್ವರದ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ.
ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಸುಕ್ಷೇತ್ರ ಬಸವ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವು ಇದೆ ಡಿಸೆಂಬರ್ 11 ರಿಂದ 18 ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು ಈ ವರ್ಷವು ಜಾತ್ರೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 1996 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಳಗದಿಂದ ಯೋಗ ಗುರುಗಳಾದ ಕಾಶಿನಾಥ್ ಅವಟಿ ನೇತೃತ್ವದಲ್ಲಿ ಡಿಸೆಂಬರ್ 9 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 5:30 ರಿಂದ 7:30ರ ವರೆಗೆ ಯೋಗ ಶಿಬಿರ ನಡೆಯಲಿದೆ.
ದಿನಾಂಕ 11 ರಂದು ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಆಗಮನ ಪಲ್ಲಕ್ಕಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ನಡೆಯಲಿದೆ ಹಾಗೂ ಅನ್ನಪ್ರಸಾದ ನಡೆಯಲಿದ್ದು, ಆದೆ ದಿನ ರಾತ್ರಿ ಚೌಡಕಿಪದಗಳು ಜರುಗಲಿವೆ. ದಿನಾಂಕ 12 ರಂದು ಬೆಳಿಗ್ಗೆ 8 ಗಂಟೆಗೆ ಗೇರ್ ಗಾಡಿಯ ಸ್ಟೋ ಸೈಕಲ್ ಮೋಟರ್ ರೆಸ್, ಸಂಜೆ 4 ಗಂಟೆಗೆ ಚಿನ್ನು ಗ್ರೂಪ್ ವತಿಯಿಂದ ಹಾಲ ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹಾಗೂ ಓಪನ್ ಟಗರಿನ ಕಾಳಗ ನಡೆಯಲಿದೆ. ಸಂಜೆ 7ಗಂಟೆಗೆ 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶ್ರೀ ಕಲಾಗುರು ಮೆಲೋಡಿಸ್ ಇಂಗಳೇಶ್ವರ ಇವರಿಂದ ಹಾಸ್ಯರಸಮಂಜರಿ ಕಾರ್ಯಕ್ರಮ ಜರುಗಲಿದೆ. ದಿನಾಂಕ 13 ರಂದು 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶಿರಗುಪ್ಪಿಯ ಶ್ರೀ ಸ್ವಾಮಿ ವಿವೇಕಾನಂದ ಯೋಗಿಮಂದಿರ ಮಲ್ಲಗಂಬ ತರಬೇತಿ ಕೇಂದ್ರದಿಂದ ಮಲ್ಲಗಂಬ ಪ್ರದರ್ಶನಗೊಳ್ಳಲಿದೆ. ದಿನಾಂಕ 14 ರಂದು ಬೆಳಿಗ್ಗೆ 9 ಗಂಟೆಗೆ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆ ನಡೆಯಲಿದೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ವಿಜಯಪುರ,ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುದುರಿಸಾಲೊಡಗಿ ಹಾಗೂ ಗ್ರಾಮ ಪಂಚಾಯಿತಿ ಇಂಗಳೇಶ್ವರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅದೇ ದಿನ ಸಂಜೆ 5 ಗಂಟೆಗೆ 2000ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವ ಸ್ನೇಹ ಸಮ್ಮಿಲನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ತದನಂತರ ಕೊಣ್ಣೂರಿನ ಜೈ ಕಿಸಾನ್ ಸಂಸ್ಕೃತಿಕ ಮತ್ತು ಜನಪದ ಕಲಾತಂಡದಿಂದ ಜನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸಿದ್ದಪ್ಪ ಬಿದರಿಯವರು ಪಾಲ್ಗೊಳ್ಳಲಿದ್ದಾರೆ.
ದಿನಾಂಕ 15 ರಂದು ಬೆಳಿಗ್ಗೆ 8 ಗಂಟೆಗೆ ಜೋಡು ಎತ್ತಿನ ಓಟದ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ರೇವಣಸಿದ್ದೇಶ್ವರ ನವೋದಯ ಮತ್ತು ಸೈನಿಕ ಕೋಚಿಂಗ್ ಕ್ಲಾಸ್ ಇಂಗಳೇಶ್ವರ ವತಿಯಿಂದ ತಾಲೂಕು ಮಟ್ಟದ ರಸಪಶ್ನೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀ ನೆಲಮಾಳಸಿದ್ದೇಶ್ವರ ಡೊಳ್ಳಿನ ಹಾಡಕಿ ಸಂಘ ಇಂಗಳೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಡೊಳ್ಳಿನ ಹಾಡಿಸಿ ಸಂಘ ಮನಗೂಳಿ ಇವರಿಂದ ಡೊಳ್ಳಿನ ಪದಗಳು ಜರಗುವುದು. ಸಂಜೆ 7:30ಕ್ಕೆ 2003 ನೇ ಸಾಲಿನ ಬಾಲ್ಯದ ಗೆಳೆಯರ ಬಳಗದ ವತಿಯಿಂದ ಜೀ ಕನ್ನಡ ಮಾದರಿಯ ಸರಿಗಮಪ ಗ್ರಾಂಡ್ ಫಿನಾಲೆ ಆದ್ಧೂರಿ ಕಾರ್ಯಕ್ರಮ ಹಾಗೂ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ. ಅದೇ ದಿನ ರಾತ್ರಿ 9ಕ್ಕೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇಂಗಳೇಶ್ವರ ಹಾಗೂ ಪ್ರೀತಿಯ ಪಾರಿವಾಳ ಖ್ಯಾತಿಯ ರಮೇಶ್ ಕುರಬಗಟ್ಟಿ ಇವರ ಶ್ರೀ ಜಗದ್ಗುರು ಶ್ರೀ ಶಿವಾನಂದ ಭಜನಾ ಮಂಡಳಿ ಕುರುಬಗಟ್ಟಿ ಇವರಿಂದ ಬಜನಾ ಪದಗಳು ಜರಗಲಿವೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮ ಜರುಗಲಿವೆ ಎಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಯಮನಪ್ಪ ಚೌಧರಿ
ಶ್ರೀ ಮಲೇಶಂಕರ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ
ಆಯನೂರು ಸಮೀಪದ ಮಂಜರಿಕೊಪ್ಪ, ಮಲೇಶಂಕರ ಗ್ರಾಮದ ಶ್ರೀ ಮಲೇಶಂಕರ ದೇವಸ್ಥಾನದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರ್ತೀಕ ಮಾಸದ ಅಮಾವಾಸ್ಯೆಯ ದಿನ, ಅಂದರೆ ಡಿಸೆಂಬರ್ 1 ನೇ ತಾರೀಕು ಭಾನುವಾರ ಅತೀ ವಿಜೃಂಭಣೆಯಿಂದ ದೀಪೋತ್ಸವ ನಡೆಯಲಿದೆ.ಆ ದಿನ ಬೆಳಿಗ್ಗೆ 11:30 ಕ್ಕೆ ರುದ್ರಾಭಿಷೇಕ ಮತ್ತು ರುದ್ರಹೋಮ, ನಂತರ ಶ್ರೀ ಸತ್ಯನಾರಾಯಣ ಪೂಜೆ ನೆರವೇರಲಿದೆ.ಸಂಜೆ 7 ಗಂಟೆಯಿಂದ ಕಾರ್ತೀಕ ದೀಪೋತ್ಸವ ನಂತರ ಅನ್ನ ಸಂತರ್ಪಣೆ ಇರುತ್ತದೆ.ಈ ಎಲ್ಲಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಕಾರಂತ್ ಇವರ ನೇತೃತ್ವದಲ್ಲಿ ನೇರವೇರಲಿದೆ. ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಲೇಶಂಕರ ದೇವಳದ ವ್ಯವಸ್ಥಾಪನಾ ಸಮಿತಿಯವರು ಹಾಗೂ ತಹಶೀಲ್ದಾರರು ಮತ್ತು ಮುಜರಾಯಿ ಇಲಾಖೆಯವರು ವಿನಂತಿಸಿದ್ದಾರೆ.
ಹಲಕರ್ಟಿಯಲ್ಲಿ ಅಂಬಲಿ ಬಿಂದಿಗೆ ಮೆರವಣಿಗೆ
ಚಿತ್ತಾಪೂರ:- ತಾಲೂಕಿನ ವಾಡಿ ಸಮೀಪದ ಹಲಕರ್ಟಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ಚಿಕ್ಕವೀರಪ್ಪನವರ ಮನೆಯಿಂದ ಮಲ್ಲಯ್ಯನ ದೇವಸ್ಥಾನ ವರೆಗೆ ಅಂಬಲಿ ಬಿಂದಿಗೆಭವ್ಯ ಮೆರವಣಿಗೆ ಜರುಗಿತು. ಊರಿನ ಪ್ರಮುಖ ಓಣಿಯಲ್ಲಿ ಮಲಯ್ಯ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು ಮೆರವಣಿಗೆಗೆ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ಗಳು ಎತ್ತಿನ ಬಂಡಿ ಏರಿ ಮಲಯ್ಯ ದೇವಸ್ಥಾನವರೆಗೆ ಆಗಮಿಸಿದರು.ಡೋಲು, ಬಾಜಾಭಜಂತ್ರಿ, ಭಜನೆ,ಹಲಗಿ ಕುಣಿತ, ದೇವರ ಜಯ ಘೋಷಣೆಯೊಂದಿಗೆ ಜನರು ಮೆರಗು ತಂದರು. ಚಂದ್ರಕಾಂತ್ ಮೇಲಿನಮನಿ. ಶರಣಪ್ಪ ಚಾಗಿ. ನಾಗರಾಜ ಪೂಜಾರಿ. ನಾಗಣ್ಣ ಮುಗುಟಿ. ಬಸವರಾಜ್ ಲೋಕನಳ್ಳಿ. ಅಶೋಕ್ ಛತ್ರಿಕಿ. ಮಲ್ಲಪ ಯಧುರುಮನಿ.ಮಲ್ಲಿಕಾರ್ಜುನ ಬಡಿಗೇರ್. ಶ್ರೀಶೈಲ್ ಬಡಿಗೇರ್ ಅಭಿಷೇಕ್ ಅಂಗಡಿ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡರು.
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ
