ಹಾಸನ: ಸಂಸದ ಶ್ರೇಯಸ್ ಪಟೇಲ್ ನವದೆಹಲಿಯಲ್ಲಿಂದು ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಹಾಸನ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಲವು ಮನವಿಗಳನ್ನು ಸಲ್ಲಿಸಿದರು.
ಪ್ರಮುಖವಾಗಿ ಹಾಸನದ ಹೊಸ ಬಸ್ ನಿಲ್ದಾಣ ಎದುರಿನ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಶೀಘ್ರವೇ ಮುಗಿಸಿಕೊಡುವಂತೆ ಸಂಸದರು ಕೇಂದ್ರ ಸಚಿವರ ಗಮನ ಸೆಳೆದರು.
ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ, ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ಕುಶಾಲನಗರ ಮೂಲಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹೊಸದಾಗಿ ರೈಲ್ವೇ ವ್ಯವಸ್ಥೆ ಕಲ್ಪಿಸಿ, ಆ ಮೂಲಕ ಸಾವಿರಾರು ಪ್ರಯಾಣಿಕರಿಗೆ ರೈಲ್ವೆ ಸಂಚಾರಕ್ಕೆ ಪ್ರಯೋಜನ ಒದಗಿಸುವಂತೆ ಮನವಿ ಮಾಡಿದರು.
ಹೊಳೆನರಸೀಪುರದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ, ಮೈಸೂರು ಮೂಲಕ ಅರಸೀಕೆರೆ – ಹೊಳೆನರಸೀಪುರಕ್ಕೆ ಬೆಳಗ್ಗೆ ಡೆಮೊ ರೈಲು ಸೇವೆಗೆ ಅನುಮತಿ ನೀಡುವಂತೆ ಸಚಿವರಲ್ಲಿ ಸಂಸದರು ಕೋರಿದರು.
ಹಾಸನ ನಗರ ಬೆಂಗಳೂರಿಗೆ ಸಮೀಪದಲ್ಲಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಉಭಯ ನಗರಗಳ ನಡುವೆ ನಿತ್ಯವೂ ಸಂಚರಿಸುತ್ತಿದ್ದಾರೆ. ಆದರೆ ಜನರ ಪ್ರಯಾಣದ ಸಂಖ್ಯೆಗೆ ಅನುಗುಣವಾಗಿ ರೈಲ್ವೇ ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ, ಬೆಂಗಳೂರು – ಹಾಸನ ನಡುವೆ ಬೆಳಗ್ಗೆ 9 ರಿಂದ 10ರ ನಡುವೆ ಒಂದು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಓಡಾಟ ಆರಂಭಿಸುವಂತೆ ಸಚಿವರಲ್ಲಿ ಕೋರಿಕೆ ಸಲ್ಲಿಸಿದರು.
ಹಾಸನದ ಭೂ ಪ್ರದೇಶ ಐಟಿ ಉದ್ಯಮಕ್ಕೂ ಪೂರಕವಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿದೆ. ಇಲ್ಲಿ ಕುಶಲ ಉದ್ಯೋಗಿಗಳು, ಸಂಪನ್ಮೂಲಗಳ ಲಭ್ಯತೆಯೂ ಹೇರಳವಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಹಾಸನದಲ್ಲಿ ಒಂದು ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವಂತೆ ಇದೇ ವೇಳೆ ಬೇಡಿಕೆ ಸಲ್ಲಿಸಿದರು. ನನ್ನ ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವರು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ವರದಿ ಪರ್ವಿಜ್ ಅಹಮದ್ ಹಾಸನ