ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಭಾರತ ತಂಡಕ್ಕೆ ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡದ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು ತೆಗೆದುಕೊಂಡ ನಿರ್ಧಾರವು ಸಾಕಷ್ಟು ಅಭಿಮಾನಿಗಳು ಮತ್ತು ತಜ್ಞರಿಂದ ಟೀಕೆಗೆ ಕಾರಣವಾಯಿತು. ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರನ್ನು ಆಲ್ರೌಂಡರ್ಗಳನ್ನಾಗಿ ಆಯ್ಕೆ ಮಾಡುವ ಬಿಸಿಸಿಐ ನಿರ್ಧರಾವು ರಿಂಕುಗೆ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಯಿತು. ರಿಂಕು ಸಿಂಗ್ ಅವರಿಗೆ ಐಪಿಎಲ್ 2024ನೇ ಆವೃತ್ತಿಯಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಸಿಕ್ಕಿದ್ದ ಅಲ್ಪ ಅವಕಾಶದಲ್ಲಿ ಅವರು ಕೇವಲ 168 ರನ್ ಗಳಿಸಿದ್ದಾರೆ. ಆದಾಗ್ಯೂ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಪರ್ಧೆಯಲ್ಲಿ ಜಯಗಳಿಸಿದೆ.T20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ರಿಂಕು ಸಿಂಗ್ ಈಗ ಮೌನ ಮುರಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳದಿರುವ ನಿರ್ಧಾರದ ಬಗ್ಗೆ ಮತ್ತು ಆ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಸಹ ಬಹಿರಂಗಪಡಿಸಿದ್ದಾರೆ.
‘ಹೌದು, ಉತ್ತಮ ಪ್ರದರ್ಶನ ನೀಡಿದರೂ ಆಯ್ಕೆಯಾಗದಿದ್ದರೆ ಯಾರಿಗಾದರೂ ಸ್ವಲ್ಪ ಬೇಸರವಾಗುತ್ತದೆ. ಆದರೆ, ಈ ಬಾರಿ ತಂಡದ ಸಂಯೋಜನೆಯಿಂದ ನಾನು ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಪರವಾಗಿಲ್ಲ, ಯಾರೊಬ್ಬರ ಕೈಯಲ್ಲಿಲ್ಲದ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಹೌದು, ಆರಂಭದಲ್ಲಿ ನಾನು ಕೊಂಚ ಬೇಸರಗೊಂಡಿದ್ದೆ. ಈಗ ಏನು ನಡೆದಿದೆಯೋ ಪರವಾಗಿಲ್ಲ. ಏನೇ ನಡೆದರೂ ಅದೆಲ್ಲವೂ ಒಳ್ಳೆಯದಕ್ಕಾಗಿಯೇ ನಡೆದಿದೆ. ರೋಹಿತ್ ಭಯ್ಯಾ ವಿಶೇಷವಾಗಿ ಏನನ್ನೂ ಹೇಳಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಎಂದು ಮಾತ್ರ ಹೇಳಿದರು. ಎರಡು ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಇದೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಅವರು ನನಗೆ ಹೇಳಿದರು’ ಎಂದು ರಿಂಕು ದೈನಿಕ್ ಜಾಗರಣ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಐಪಿಎಲ್ 2024ರ ಫೈನಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಎಂಟು ವಿಕೆಟ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫ್ರಾಂಚೈಸಿಗೆ ಇದು ಮೂರನೇ ಐಪಿಎಲ್ ಟ್ರೋಫಿಯಾಗಿದೆ.’ಇದೀಗ ಅತ್ಯುತ್ತಮ ಭಾವನೆ ನನ್ನಲ್ಲಿದೆ. ಕನಸು ನನಸಾಗಿದೆ. ನಾನು 7 ವರ್ಷಗಳಿಂದ ಇಲ್ಲಿದ್ದೇನೆ ಮತ್ತು ನಾವು ತುಂಬಾ ಸಂತೋಷವಾಗಿದ್ದೇವೆ. ಇದರ ಕ್ರೆಡಿಟ್ ಜಿಜಿ (ಗೌತಮ್ ಗಂಭೀರ್) ಸರ್ ಅವರಿಗೆ ಸಲ್ಲಬೇಕು. ನಾನು ಅಂತಿಮವಾಗಿ ಐಪಿಎಲ್ ಟ್ರೋಫಿಯನ್ನು ಎತ್ತಿದ್ದೇನೆ. ಇದು ದೇವರ ಯೋಜನೆ’ ಎಂದು ವಿಜಯದ ನಂತರ ರಿಂಕು ಹೇಳಿದರು.