ಚನ್ನಗಿರಿ ಪೊಲೀಸ್‌ ವಶದಲ್ಲಿ ವ್ಯಕ್ತಿ ಸಾವು ಪ್ರಕರಣ: CID ತನಿಖೆ ಆರಂಭ

ಚನ್ನಗಿರಿ ಪೊಲೀಸ್‌ ವಶದಲ್ಲಿ ವ್ಯಕ್ತಿ ಸಾವು ಪ್ರಕರಣ: CID ತನಿಖೆ ಆರಂಭ

Share

ಚನ್ನಗಿರಿ (ದಾವಣಗೆರೆ): ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭ ನಡೆದಿದ್ದ ಆದಿಲ್‌ ಸಾವು ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸೋಮವಾರ ತನಿಖೆ ಆರಂಭಿಸಿದ್ದಾರೆ.

ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಇದರಂತೆ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ನೇತೃತ್ವದ ತಂಡ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿ ಯಲ್ಲಿದ್ದು, ಪೊಲೀಸ್ ಬಿಗಿ ಭದ್ರತೆ ಮುಂದುವರೆದಿದೆ.

ಘಟನೆ ಸಂಬಂಧ ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೋಳಿ, ಪೊಲೀಸ್ ಇನ್‌ಸ್ಪೆಕ್ಟರ್ ಬಿ. ನಿರಂಜನ್ ಹಾಗೂ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಆರೋನ್ ಅಖ್ತರ್ ಅವರನ್ನು ಅಮಾನತು ಮಾಡಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್ ಅವರು ಅಧಿಕಾರಿಗಳ ಅಮಾನತು ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪೂರ್ವವಲಯದ ಐಜಿಪಿ ತ್ಯಾಗರಾಜನ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಇನ್ನು ಠಾಣೆಗೆ ಮುತ್ತಿಗೆ ಹಾಕಿ ಹಾನಿಗೊಳಿಸಿದ ಸಂಬಂಧ ಸೋಮವಾರ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇದರೊಂದಿಗೆ ಈವರೆಗೆ 28 ಜನರನ್ನು ವಶಕ್ಕೆ ಪಡೆದಂತಾಗಿದೆ.

ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಮೇರೆಗೆ ಚನ್ನಗಿರಿ ಪೊಲೀಸರು ಆದಿಲ್‌ ಖಲಿಂ ಉಲ್ಲಾ ಅವರನ್ನು ಕಳೆದ ಶುಕ್ರವಾರ ರಾತ್ರಿ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭ ಅವರು ಮೃತಪಟ್ಟಿದ್ದರು.

ಇದು ‘ಲಾಕಪ್‌ ಡೆತ್‌’ ಎಂದು ಸಂಬಂಧಿಕರು ದೂರಿದ್ದರು. ಶುಕ್ರವಾರ ತಡರಾತ್ರಿ ಉದ್ರಿಕ್ತರ ಗುಂಪು ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ, ಕಲ್ಲು ತೂರಿದ್ದರಿಂದ 11 ಜನ ಸಿಬ್ಬಂದಿ ಗಾಯಗೊಂಡಿದ್ದರು. ಪೊಲೀಸ್‌ ವಾಹನಗಳನ್ನು ಜಖಂಗೊಳಿಸಿ ಹಾನಿ ಮಾಡಲಾಗಿತ್ತು


Share