ಚಂಡೀಗಢ: ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ.
ತನ್ನಿಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸದ್ಯ ಹರಿಯಾಣದ ರೋಹ್ಟಕ್ನಲ್ಲಿರುವ ಸುನಾರಿಯಾ ಜೈಲಿನಲ್ಲಿದ್ದಾರೆ.’ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಗುರ್ಮೀತ್ ಸಿಂಗ್ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ’ ಎಂದು ಡೇರಾ ಸಚ್ಚಾ ಮುಖ್ಯಸ್ಥರ ವಕೀಲ ಜಿತೇಂದರ್ ಖುರಾನಾ ಹೇಳಿದ್ದಾರೆ.
ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರನ್ನು 2002ರ ಜುಲೈ 10ರಂದು ಹರಿಯಾಣದ ಕುರುಕ್ಷೇತ್ರದ ಖಾನ್ಪುರ್ ಕೊಲಿಯನ್ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ 19 ವರ್ಷಗಳ ನಂತರ 2021ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪಂಚಕುಲದ ಸಿಬಿಐ ನ್ಯಾಯಾಲಯವು ಶಿಕ್ಷೆ ವಿಧಿಸಿದ ನಂತರ, ಗುರ್ಮೀತ್ ಸಿಂಗ್ ಅವರು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.ಡೇರಾ ಸಚ್ಚಾ ಸೌದದ ಪ್ರಧಾನ ಕಚೇರಿಯಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಂದ ಮಹಿಳೆಯರನ್ನು ಹೇಗೆ ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬುದನ್ನು ವಿವರಿಸುವ ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಅವರ ಶಂಕಿತ ಪಾತ್ರಕ್ಕಾಗಿ ರಂಜಿತ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.