ಬೆಂಗಳೂರು: ಬಿತ್ತನೆ ಬೀಜದ ಬೆಲೆ ಏರಿಕೆ ಖಂಡಿಸಿ ಕೃಷಿ ಸಚಿವ ಮತ್ತು ಸರ್ಕಾರದ ವಿರುದ್ದ ಜೆಡಿಎಸ್ ಆಕ್ರೋಶ ಹೊರಹಾಕಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ಕೃಷಿ ಸಚಿವರೇ ಎಲ್ಲಿದಿರಪ್ಪಾ ಎಂದು ಪ್ರಶ್ನಿಸಿದೆ.
ಬಿತ್ತನೆ ಬೀಜದ ದರ ಶೇ.60ರಷ್ಟು ಹೆಚ್ಚಳವಾಗಿದೆ. ಪಂಚ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡಿದೆ ಎಂದು ಬೀಗುವ ಕಾಂಗ್ರೆಸ್ ಸರಕಾರ ಮಾಡಿರುವ ಘನಕಾರ್ಯ ಇದು. ಒಂದು ಕೈಯ್ಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯ್ಯಲ್ಲಿ ಸುಲಿಗೆ ಮಾಡುತ್ತಿರುವ ಘನಕಾರ್ಯವಿದು. ಕೊಟ್ಟ ಹಾಗೆ ಕೊಟ್ಟು ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿರುವ ಕಿಡಿಗೇಡಿ ಕೆಲಸ ಇದು.ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಲಭ್ಯವಿದ್ದ ಬಿತ್ತನೆ ಬೀಜದ ಬೆಲೆ ಏರಿಕೆಯಾದ ಪರಿಣಾಮ, ಮುಕ್ತ ಮಾರುಕಟ್ಟೆಯಲ್ಲಿಯೂ ದರ ದುಪ್ಪಟ್ಟಾಗಿದೆ. ತಕ್ಷಣವೇ ಸರಕಾರ ಬಿತ್ತನೆ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆಗೆ ನಿಯಂತ್ರಣ ವಿಧಿಸಬೇಕು. ಕೃಷಿ ಸಚಿವರೇ.. ಎಲ್ಲಿದ್ದೀರಪ್ಪ? ಎಂದು ಪ್ರಶ್ನಿಸಿದೆ.
ಮತ್ತೊಂದು ಪೋಸ್ಟ್ ನಲ್ಲಿ ಸರಕಾರದ ಕೆಲಸ ದೇವರ ಕೆಲಸ. ಪೂಜ್ಯ ಶ್ರೀ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ಮೇಲೆ ಬರೆಸಿರುವ ಈ ಧ್ಯೇಯವಾಕ್ಯವನ್ನು ಕಾಂಗ್ರೆಸ್ ಸರಕಾರ ಗಾಳಿಗೆ ತೂರಿದೆ. ಜನರ ಕೆಲಸವನ್ನು ದೇವರ ಕೆಲಸದಂತೆ ನಿಷ್ಠೆ, ಶ್ರದ್ಧೆಯಿಂದ ಮಾಡಬೇಕಿದ್ದ ಕರ್ತವ್ಯವನ್ನು ಸರಕಾರ ಮರೆತುಬಿಟ್ಟಿದೆ. 3 ತಿಂಗಳಿಂದ ಅನ್ನಭಾಗ್ಯ ಹಣ ಸ್ಥಗಿತವಾಗಿದೆ. ಬಿತ್ತನೆ ಬೀಜ ದರ ಶೇ.60-70ರಷ್ಟು ಏರಿಕೆಯಾಗಿದೆ. ಕೊಪ್ಪಳದಲ್ಲಿ ಸರ್ಜರಿಗೆ 3 ತಿಂಗಳು ಕಾಯಬೇಕಾಬೇಕಾಗಿದೆ. ಕಾವೇರಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಕೃಷಿ ಸಚಿವರೇಎಲ್ಲಿದ್ದಿರಪ್ಪ? ಎಂದು ಕಿಡಿಕಾರಿದೆ.