ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ಜಯಣ್ಣ ಎಂಬುವರ ಒಡೆತನದ ಐದು ಎಕರೆ ಜಾಗದಲ್ಲಿದ್ದ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಅವರ ಆಪ್ತರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣದ 13 ಮಂದಿ ಆರೋಪಿಗಳಲ್ಲೊಬ್ಬರಾದ ಜಯಣ್ಣ ಅವರ ಸೋದರಳಿಯ ವಿನಯ್ ರೇಣುಕಾಸ್ವಾಮಿಯನ್ನು ಶೆಡ್ನಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ವಿನಯ್ ಆರ್ ಆರ್ ನಗರದ ಸ್ಟೋನಿ ಬ್ರೂಕ್ ಎಂಬ ಪಬ್ ಮಾಲೀಕನಾಗಿದ್ದಾನೆ.
ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಪವಿತ್ರಾ ಗೌಡ ಅವರ ಆಪ್ತ ಪವನ್ ಅವರ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಅಪಹರಿಸಲಾಗಿದೆ ಎನ್ನಲಾಗಿದೆ.
ಅಲ್ಲದೆ, ರೇಣುಕಾಸ್ವಾಮಿ ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದಾಗ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಕೂಡ ಶೆಡ್ಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.ಪೊಲೀಸರು ಸೀಝ್ ಮಾಡಿದ ವಾಹನಗಳನ್ನು ನಿಲ್ಲಿಸಲು ಇಂಟ್ಯಾಕ್ಟ್ ಆಟೋಪಾರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಜಯಣ್ಣ ಅವರು ತಮ್ಮ ಶೆಡ್ ನ್ನು ಬಾಡಿಕಗೆಗೆ ನೀಡಿದ್ದರು. ಆದರೆ, ಈ ಶೆಡ್ ನಲ್ಲಿಯೇ ರೇಣುಕಾಸ್ವಾಮಿಯವರ ಹತ್ಯೆಯಾಗಿದೆ.
ಈ ನಡುವೆ ಪ್ರಕರಣ ಸಂಬಂಧ ಪಟ್ಟಣಗೆರೆ ಜಯಣ್ಣ ಅವರು ಹೇಳಿಕೆ ನೀಡಿದ್ದು, ವಿನಯ್ ನನ್ನ ತಂಗಿಯ ಮಗ. ಶೆಡ್ ನಲ್ಲಿ ಕೊಲೆ ನಡೆದಿರುವುದು ನನಗೆ ತಿಳಿದಿರಲಿಲ್ಲ. ಮಾಧ್ಯಮಗಳ ಮೂಲಕ ತಿಳಿಯಿತು. ಪ್ರಕರಣ ಸಂಬಂಧ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಕಿಶೋರ್ ಎಂಬುವವರಿಗೆ ಶೆಡ್ ಬಾಡಿಗೆಗೆ ನೀಡಲಾಗಿದೆ. ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರೆ, ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ. ನನ್ನ ಮಾಲೀಕತ್ವದ ಭೂಮಿಯಲ್ಲಿಯೇ ಅಪರಾಧ ನಡೆದಿರುವುದರಿಂದ ಯಾವುದೇ ರೀತಿಯ ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆಂದು ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಅಪರಾಧ ಅಧಿಕಾರಿಗಳ ತಂಡ (ಎಸ್ಒಸಿಒ) ಶೆಡ್ಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ.
ಏತನ್ಮಧ್ಯೆ, ಪವಿತ್ರಾ ಅವರು ಘಟನೆಗೂ ಮುನ್ನ ತಮ್ಮ ಪೋಸ್ಟ್ವೊಂದರಲ್ಲಿ ರೇಣುಕಾಸ್ವಾಮಿಗೆ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿರುವುದು ಕಂಡು ಬಂದಿದೆ.