ಪುಣೆ: ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲ ಆರೋಪಿಯ ರಕ್ತದ ಮಾದರಿಯನ್ನು ಆತನ ತಾಯಿಯ ರಕ್ತದ ಮೂಲಕ ಬದಲಾಯಿಸಲಾಗಿತ್ತು ಎಂದು ದೃಢಪಟ್ಟ ನಂತರ ಪುಣೆ ಪೊಲೀಸರು ಬಾಲ ಆರೋಪಿಯ ತಾಯಿಯನ್ನು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ತಾಯಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಬಾಲಾಪರಾಧಿಯ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದ ಮಾದರಿಯೊಂದಿಗೆ ಬದಲಾಯಿಸಲಾಗಿದೆ ಎಂದು ಅಪಘಾತದ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ. ಬಾಲಾಪರಾಧಿಯ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಎರಡು ದಿನಗಳ ಹಿಂದೆ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದರು.ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣದ ಕುರಿತು ಪುಣೆ ಅಪರಾಧ ದಳದ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಪ್ರತಿದಿನವೂ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕುಡಿದು ಕಾರು ಚಲಾಯಿಸಿ ಅಪಘಾತ ನಡೆಸಿದ 17 ವರ್ಷದ ಬಾಲಕನ ತಂದೆ ಹಾಗೂ ಅಜ್ಜನ ಪಾತ್ರದ ಬಳಿಕ, ಈಗ ಆತನ ತಾಯಿಯ ಪಾತ್ರವೂ ಮುನ್ನೆಲೆಗೆ ಬಂದಿದೆ.
17 ವರ್ಷದ ಅಪ್ರಾಪ್ತನನ್ನು ಜೂನ್ 5 ರವರೆಗೆ ನಿಗಾ ಕಾರಾಗೃಹಕ್ಕೆ ಕಳುಹಿಸಿ, ಆತನ ತಂದೆ, ರಿಯಾಲ್ಟರ್ ವಿಶಾಲ್ ಅಗರ್ವಾಲ್ ಮತ್ತು ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಬಂಧಿಸಲಾಗಿತ್ತು. ಅಪ್ರಾಪ್ತ ಬಾಲಕನ ತಂದೆ ಮತ್ತು ಅಜ್ಜನ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ನ್ಯಾಯಾಲಯವು ನಿನ್ನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಅಪಘಾತದ ಸಮಯದಲ್ಲಿ ಬಾಲಕ ಮದ್ಯಪಾನ ಮಾಡಿರಲಿಲ್ಲ ಎಂದು ತೋರಿಸಲು ಆತನ ರಕ್ತದ ಮಾದರಿಗಳನ್ನು ತಾಯಿಯ ರಕ್ತ ಪಡೆದುಕೊಂಡು ಅದಲು ಬದಲು ಮಾಡಿ ಪ್ರಯೋಗಾಲಯಕ್ಕೆ ನೀಡಿದ ಆರೋಪದಲ್ಲಿ ಸಾಸೂನ್ ಜನರಲ್ ಆಸ್ಪತ್ರೆಯ ಆಗಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ವಿಶಾಲ್ ಅಗರ್ವಾಲ್, ಡಾ ಅಜಯ್ ತಾವರೆ ಮತ್ತು ಡಾ ಶ್ರೀಹರಿ ಹಲ್ಮೂರು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಹಾಗೂ ಇಬ್ಬರು ವೈದ್ಯರಿಗೆ ನೀಡಲು ಬಿಲ್ಡರ್ ವಿಶಾಲ್ ಅಗರವಾಲ್ ಮನೆಯಿಂದ 3 ಲಕ್ಷ ರೂ ಲಂಚ ಕೊಂಡೊಯ್ದಿದ್ದ ಜವಾನ ಅತುಲ್ ಘಾಟ್ಕಂಬ್ಲೆಯನ್ನು ಕೂಡ ವಶಕ್ಕೆ ಪಡೆಯಲಾಗಿದೆ.ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ವಿಶಾಲ್ ಅಗರ್ವಾಲ್ ಅವರ ಕಸ್ಟಡಿಗೆ ಅರ್ಜಿ ಸಲ್ಲಿಸಿದ್ದಾರೆ. ಪೋರ್ಷೆ ಅಪಘಾತದಲ್ಲಿ ಭಾಗಿಯಾಗಿರುವ ಅಪ್ರಾಪ್ತ ವಯಸ್ಕನನ್ನು ತನಿಖೆ ಮಾಡಲು ಜುವೆನೈಲ್ ಜಸ್ಟೀಸ್ ಬೋರ್ಡ್ (JJB) ಪೊಲೀಸರಿಗೆ ಅನುಮತಿ ನೀಡಿದೆ. ಬಾಲನ್ಯಾಯ ಕಾಯ್ದೆಯಡಿ ಅಪ್ರಾಪ್ತ ವಯಸ್ಕನ ವಿಚಾರಣೆಯನ್ನು ಪೋಷಕರ ಸಮ್ಮುಖದಲ್ಲಿ ನಡೆಸಬೇಕು.
ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಮುಂದಿನ ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಆಯುಕ್ತ ಪ್ರಶಾಂತ್ ನಾರ್ಣವಾರೆ ಈ ಹಿಂದೆ ತಿಳಿಸಿದ್ದರು.